KannadaModel Question PapersQUESTION BANKQuizSpardha TimesTET - CET

ಟಿಇಟಿ ಪ್ರಶ್ನೆಪತ್ರಿಕೆ – 2021- PAPER-2 । PART-1- LANGUAGE-1- KANNADA – Key Answers

Share With Friends

ಟಿಇಟಿ ಪ್ರಶ್ನೆಪತ್ರಿಕೆ – 2021- PAPER-2 । PART-1- LANGUAGE-1- KANNADA

ಸೂಚನೆ: ಈ ಕೆಳಗಿನ ಗದ್ಯಭಾಗವನ್ನು ಓದಿ 1 ರಿಂದ 8 ಪ್ರಶ್ನೆಗಳಿಗೆ ಉತ್ತರಿಸಿರಿ..

ಮಂಜಣ್ಣ ನಮ್ಮ ಮನೆಯ ಆಳು; ಬಹಳ ಹಳೆಯ ಮನುಷ್ಯ. ಅಂದರೆ ಸುಮಾರು ಅರವತ್ತು ವರ್ಷ. ಅವನ ಮುಖದ ತುಂಬ ಬಿಳಿಯ ಗಡ್ಡ ಮೀಸೆ, ತಲೆಯ ತುಂಬ ಹಣ್ಣು ಹಣ್ಣು ಕೂದಲು, ಅವನ ಗಡ್ಡವೇನು ಮಲೆನಾಡಿನ ಗಿರಿಗಳ ಮೇಲೆ ನಿಬಿಡವಾಗಿ ಬೆಳೆವ ತರುನಿಕರದಂತೆ ಉದ್ದವಾಗಿ ನೀಳವಾಗಿರಲಿಲ್ಲ. ಬಯಲು ಸೀಮೆಯ ಗುಡ್ಡಗಳಲ್ಲಿ ಬೆಳೆಯುವ ವಿರಳವಾದ ಪೊದೆಗಳಂತೆ ಇತ್ತು. ಸುಲಭೌಆಗಿ ಹೇಳುವುದಾದರೆ ಇಲಿ ತರಿದಂತೆ ಇತ್ತು. ಅದಕ್ಕೊಂದು ಕಾರಣ ಇದೆ. ನಮ್ಮ ಮಂಜಣ್ಣ ಕ್ಷೌರಿಕರೊಡನೆ ಅಸಹಕಾರ ಮಾಡಿದ್ದ. ಅವನಿಗೆ ಕುಡುಗೋಲೇ ಮುಂಡನದ ಕೈದು.(ಆಯುಧ). ಗಡ್ಡ ಉದ್ದವಾದ ಕೂಡಲೇ ಅದರ ತುದಿಯನ್ನು ಒಟ್ಟುಗೂಡಿಸಿ, ಮಸೆತು ಹರಿತವಾದ ಕುಡುಗೋಲಿನಿಂದ ಚರಚರನೆ ಕೊಯ್ಯುತ್ತಿದ್ದ. ಬೆಳೆದು ಹಣ್ಣಾಗಿ ನಿಂತ ಭತ್ತದ ಸವರಿ ರಾಶಿ ಮಾಡುವಂತೆ.

ಮಂಜಣ್ಣನೆಂದರೆ ನಮಗೆಲ್ಲ ಪ್ರಾಣ; ಏಕೆಂದರೆ ನಮಗೆಲ್ಲ ಅವನೇ ಕತೆಗಾರ. ಆ ವೃದ್ಧಮೂರ್ತಿಯನ್ನು ನೋಡಿದ ಕೂಡಲೇ ಹುಡುಗರಾದ ನಮಗೆ ಅವನು ಆಳು ಎಂಬುದು ಮರೆತುಹೋಗಿ, ಅವನಲ್ಲಿ ಗುರುಭಾವ ಉಂಟಾಗುತ್ತಿತ್ತು ! ಲವಕುಶರಿಗೆ ವಾಲ್ಮೀಕಿಯನ್ನು ಕಂಡರೆ ಯಾವ ಭಾವ ಉಂಟಾಗುತ್ತಿತ್ತೋ ಆ ಭಾವ, ಆದರೇನು? ನಮಗೆ ಗುರು, ನಮ್ಮ ಹಿರಿಯರಿಗೆ ಆಳು ! ಅವನೂ ದಿನವೂ ಎಲ್ಲರಂತೆ ಕೆಲಸಕ್ಕೆ ಹೋಗಬೇಕಾಗಿತ್ತು. ನಾನು ಒಂದೊಂದು ಸಾರಿ ಹೀಗೆಂದು ಯೋಚಿಸುತ್ತಿದ್ದೆ, ನಾನು ಯಜಮಾನನಾದರೆ ಮಂಜಣ್ನನಿಗೆ ಕತೆ ಹೇಳುವ ಕೆಲಸವೊಂದನ್ನೆ ಕೊಡುವೆನೆಂದು! ಮುಗ್ದಾಲೋಚನೆ ! ನಾನು ಏಳೆಂಟು ವರ್ಷದ ಹುಡುಗ. ಮಂಜಣ್ಣ ಅರವತ್ತು ವರ್ಷದ ಮುದುಕ ! ನಾನು ಯಜಮಾನನಾಗುವ ತನಕ ಅವನು ಬದುಕಿರುವನೆ? ಹೌದು ಆಗ ಇರುವನೆಂದೇ ಭಾವಿಸಿದ್ದೆ.

ಪ್ರತಿದಿನ ಹೊತ್ತು ಎಷ್ಟು ಮುಳುಗುವುದೋ ಎಂದು ನಾವೆಲ್ಲ ಹಾರೈಕೆಯಿಂದ ಎದುರು ನೋಡುತ್ತಾ ಇರುತ್ತಿದ್ದೆವು. ಏಕೆಂದರೆ ಕತ್ತಲಾಗಲು ಮಂಜಣ್ಣ ನಮಗೆ ಕತೆ ಹೇಳುತ್ತಿದ್ದ. ಮಂಜಣ್ಣನೆಂದರೆ ನಿಜವಾಗಿಯೂ ‘ ಕಥಾ ಸರಿತ್ಸಾಗರ’ ಅವೆಲ್ಲಾ ಅವನ ಕತೆಗಳೋ? ಅಥವಾ ಅನ್ಯರಿಂದ ಕಲಿತವುಗಳೋ ಏನೋ? ನಮಗೆ ತಿಳಿಯದು. ಕತೆಗಂತೂ ಅವನ ಕಲ್ಪವೃಕ್ಷವೇ ಸರಿ. “ ಮಂಜಣ್ಣ ಕತೆ ಹೆಳೋ’ ಎಂದು ಹೇಳುವುದೇ ತಡ ಕತೆಯ ಪ್ರವಾಹ ಹಲ್ಲಿಲ್ಲದ ಅವನ ಮಂದಿ ಬಾಯಿಯಿಂದ ಹೊರಸೂಸುತ್ತಿತ್ತು. ನಾವೆಲ್ಲಾ ಒಂದೇ ಮನಸ್ಸಿನಿಂದ ಕತೆ ಕೇಳುತ್ತಾ ಕುಳಿತು ಬಿಡುತ್ತದ್ದೆವು.

1. ಮಕ್ಕಳಿಗೆ ಮಂಜಣ್ಣನಲ್ಲಿ ಗುರುಭಾವ ಉಂಟಾಗಲು ಕಾರಣ, ಅವನು
1. ವೃದ್ಧನಾಗಿದ್ದುದರಿಂದ
2. ಮನೆಯ ಆಳಾಗಿದ್ದುದರಿಂದ
3. ಕತೆಗಳನ್ನು ಹೇಳುತ್ತಿದ್ದರಿಂದ ✔
4. ಬಿಳಿಯ ಗಡ್ಡಮೀಸೆ ಇದ್ದುದರಿಂದ

2. ಮಂಜಣ್ಣನ ಕತೆ ಕೇಳಲು ಮಕ್ಕಳ ಹಾರೈಕೆ ಇದು.
1.ಊಟ ಬೇಗ ಮುಗಿಯಲಿ
2.ಬೇಗ ಹೊತ್ತು ಮುಳುಗಲಿ ✔
3.ಬೇಗ ಮನೆಯವರು ಮಲಗಲಿ
4. ಕತೆ ಬೇಗ ಮುಗಿಯಲಿ

3. ಮಂಜಣ್ಣ ತನ್ನ ಗಡ್ಡವನ್ನು ತೆಗೆಯಲು ಬಳಸುತ್ತಿದ್ದ ಆಯುಧ..
1. ಕುಡುಗೋಲು✔
2. ಚಾಕು
3. ಕತ್ತರಿ
4. ಬ್ಲೇಡ್

4. ಲೇಖಕರ ಪ್ರಕಾರ ಮಂಜಣ್ಣನೆಂದರೆ ಹೀಗೆ..
1.ಮನೆಯ ಆಳು
2. ವೃದ್ಧಮೂರ್ತಿ
3. ಹಾಡುಗಾಋ
4. ಕಥಾ ಸರಿತ್ಸಾಗರ ✔

5. ಲೇಖಕರು ಮಂಜಣ್ಣನ ಗಡ್ಡವನ್ನು ಇದಕ್ಕೆ ಹೋಲಿಸಿದ್ದಾರೆ..
1. ಬಯಲು ಸೀಮೆಯ ವಿರಳವಾದ ಪೊದೆಗೆ✔
2. ಮಲೆನಾಡಿನ ಗಿಡಮರಗಳಿಗೆ
3. ಹೊಲದಲ್ಲಿ ಬೆಳೆಯುವ ಹುಲ್ಲಿಗೆ
4. ಭತ್ತದ ಫೈರಿಗೆ

6. ‘ಚರಚರನೆ’ ಪದವು ಈ ವ್ಯಾಕರಣಾಂಶಕ್ಕೆ ಸೇರಿದೆ..
1. ದ್ವಿರುಕ್ತಿ
2. ನುಡಿಗೆಟ್ಟು
3. ಅನುಕರಣಾವ್ಯಯ✔
4. ಜೋಡಿಪದ

7.’ಮೇಲೋದು” ಪದವು ಈ ಸಂಧಿಗೆ ಉದಾಹರಣೆಯಾಗಿದೆ..
1.ಆಗಮಸಂಧಿ
2. ಲೋಪಸಂಧಿ✔
3. ಆದೇಶಸಂಧಿ
4. ಗುಣಸಂಧಿ

8. ಮಂಜಣ್ಣನ ಬಗೆಗೆ ಲೇಖಕರ ಮುಗ್ದಾಲೋಚನೆ ಇದು..
1. ಮಂಜಣ್ಣನನ್ನು ಮನೆಯ ಆಳಾಗಿಯೇ ಉಳಿಸಿಕೊಳ್ಳುವುದು.
2. ಮಂಜಣ್ಣನನ್ನು ಮನೆಯ ಯಜಮಾನನ್ನಾಗಿ ಮಾಡುವುದು.
3. ಮಂಜಣ್ಣನನ್ನು ತನ್ನ ಗುರುವಾಗಿಸಿಕೊಳ್ಳುವುದು.
4. ಮಂಜಣ್ಣನಿಗೆ ಕತೆ ಹೇಳುವ ಕೆಲಸವೊಂದನ್ನೆ ಕೊಡುವುದು. ✔

 

ಸೂಚನೆ: ಈ ಕೆಳಗಿನ ಪದ್ಯಭಾಗವನ್ನು ಓದಿಕೊಂಡು 9 ರಿಂದ 15 ರವರೆಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
ನೋಡು ಇದೊ ಇಲ್ಲರಳಿ ನಗುತಿದೆ
ಏಳು ಸುತ್ತಿನ ಮಲ್ಲಿಗೆ
ಇಷ್ಟು ಹಚ್ಚನೆ ಹಸುರು ಗಿಡದಿಂ-
ದೆಂತು ಮೂಡಿತೊ ಬೆಳ್ಳಗೆ !

ಮೇಲೆ ನಭದಲ್ಲಿ ನೂರು ತಾರೆಗಳ-
ಳರಲಿ ಮಿರುಗುವ ಮುನ್ನ
ಬೆಳ್ಳಿಯೊಂದೇ ಬೆಳಗುವಂದದಿ
ಗಿಡದೊಳೊಂದೇ ಹೂವಿದೆ

ಸತ್ವ ಶೀಲನ ಧ್ಯಾನಮೌನವೆ
ಅರಳಿ ಬಂದೊಲು ತೋರಿದೆ !
ಒಲವು ತುಂಬಿದ ಮುಗುದೆಯೆಯಿಂ-
ದೊಗೆದ ನಲ್ನುಡಿಯಂತಿದೆ

ಕವಿಯ ಮನದಿಂದುದಿಸಿ ಮೆಲ್ಲನೆ
ಅರಳಿ ಬರುವೊಲು ಕಲ್ಪನೆ,
ಎಂಥ ನವುರಿನ ಕುಶಲ ಕಲೆಯಿದು
ತನಗೆ ತಾನೆ ಮೂಡಿದೆ

ಮೌನದಲಿ ಮೊಳೆಯುತ್ತ ಮೆಲ್ಲನೆ
ತನಗೆ ತಾನೇ ತಿಳಿಯದೆ
ಮೊಗ್ಗಿನಲಿ ಮಲಗಿದ್ದ ಚೆಲುವಿದು
ಇಂದು ಕಣ್ನು ತೆರೆದಿದೆ

ಎನಿತು ನವರಾಗಿಗವು ದಳಗಳು
ಹಸುಳೆ ಕಾಣುವ ಕನಸೋಲು !
ಏನು ಇಂಪಿನ ಕಂಪು ಇದರದು
ಆ ಮಹಾತ್ಮಾರ ಮನದೊಲು

ಹರಿವ ಮನವನು ಹಿಡಿದು ಒಂದಡೆ
ನಿಲಿಸಿ ತೊಲೆದಿದೆ ಹೂವಿದು
ಚೆಲುವು ಬಾಳನು ಹಸನುಗೊಳಿಸುವ
ಅಚ್ಚರಿಯ ಪರಿ ಎಂಥದು !

9. ಆಕಾಶದಲ್ಲಿ ತಾರೆಗಳಿಗಿಂತ ಮೊದಲು ಬೆಳಗುವುದು ಇದು
1. ಮೋಡ
2. ಮಲ್ಲಿಗೆ
3. ಬೆಳ್ಳಿ ✔
4. ಮಿಂಚು

10. ಅರಳಿ ನಿಂತ ಮಲ್ಲಿಗೆ ಇದರ ನಲ್ನುಡಿಯಂತೆ ಎಂದು ಕವಿ ಹೇಳಿದ್ದಾರೆ.
1. ಕವಿ
2. ಸತ್ವಶೀಲ
3. ಮುಗುದ ✔
4. ರಾಜ

11. ತನಗೆ ತಾನೇ ಮೂಡಿದ ಮಲ್ಲಿಗೆ ಹೂ ಕವಿಗೆ ಹೀಗೆ ಕಂಡಿದೆ.
1. ಕುಶಲ ಕಲೆಯಂತೆ ✔
2. ಕುಶಲ ಕಲ್ಪನೆಯಂತೆ
3. ಕವಿಯ ಮನಸಿನಂತೆ
4. ಹಚ್ಚನೆ ಹಸುರಿನಂತೆ

12. ನವಿರಾಗಿರುವ ಮಲ್ಲಿಗೆಯ ದಳಗಳು ಇವರು ಕಾಣುವ ಕನಸಿನ ಹಾಗೆ ಇದೆ.
1. ಮಹಾತ್ಮರು
2. ಚೆಲುವೆ
3. ಕವಿ
4. ಹಸುಳೆ ✔

13. ಮಲ್ಲಿಗೆ ಹೂ ಇದನ್ನು ಒಂದೆಡೆ ನಿಲ್ಲಿಸಿ ತೊಳೆಯಿತು ಎಂದ ಕವಿ ಹೇಳುತ್ತಾರೆ.
1. ಹಾರುವ ಬಿಂಬಗಳನ್ನು
2. ಹಾಡುವ ಕೋಗಿಲೆಯನ್ನು
3. ಬೀಸುವ ಗಾಳಿಯನ್ನು
4. ಹರಿವ ಮನವನ್ನು✔

14. ‘ ಇಷ್ಟು’ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
1. ದಿಗ್ವಾಚಕ
2. ಗುಣವಾಚಕ
3. ಪರಿಮಾಣವಾಚಕ✔
4. ಸಂಖ್ಯಾವಾಚಕ

15. ‘ ಕವಿಯ’ ಈ ಪದದಲ್ಲಿರುವ ವಿಭಕ್ತಿ..
1. ಷಷ್ಠೀ ವಿಭಕ್ತಿ✔
2. ಪ್ರಥಮಾ ವಿಭಕ್ತಿ
3. ಸಪ್ತಮೀ ವಿಭಕ್ತಿ
4. ಚತುರ್ಥಿ ವಿಭಕ್ತಿ

16. ಭಾಷಾಬೋಧನೆ ಮತ್ತು ಕಲಿಕೆಯನ್ನು ಅವಶ್ಯವಾಗಿ ಪಾಲಿಸಬೇಕಾದ ನಿಯಮ.
1. ಕಂಠಪಾಠ ಮತ್ತು ಪುನರಾವರ್ತನೆ ನಿಯಮ
2. ಅನುಕರಣೆ ಮತ್ತು ಅಭ್ಯಾಸ ನಿಯಮ ✔
3. ಸಿದ್ದತೆ ಮತ್ತು ಪ್ರೇರಣಾ ನಿಯಮ
4. ಅನುವಂಶೀಯತೆ ಮತ್ತು ಅನುಭವ ನಿಯಮ

17. ‘ಸಾಕ್ರಟೀಸ್ ಪದ್ಧತಿ’ ಎಂದು ಹೆಸರಾಗಿರುವ ಪದ್ಧತಿ..
1. ಅನ್ವೇಷಣಾ ಪದ್ದತಿ
2. ಪ್ರಶ್ನೋತ್ತರ ಪದ್ಧತಿ✔
3. ನಿಗಮನ ಪದ್ಧತಿ
4. ಸ್ವಯಂ ಭೋಧಿನಿ ಪದ್ಧತಿ

18. ಇವುಗಳಲ್ಲಿ ಭಾಷಾ ಆಟಗಳಿಗೆ ಹೊರತಾದದ್ದು..
1. ಚರ್ಚಾಸ್ಫರ್ಧೆ✔
2. ಪದಬಂಧ
3. ಅಂತ್ಯಾಕ್ಷರಿ
4. ಒಗಟು ಬಿಡಿಸುವುದು

19. ಪ್ರಾಥಮಿಕ ಹಂತದಲ್ಲಿ ಓದು- ಬರಹ ಕಲಿಸಲು ಅಳವಡಿಸಬೇಕಾದ ಕ್ರಮ..
1. ಅನುಕರಣೆ ಮತ್ತು ಅಭ್ಯಾಸಗಳು✔
2. ದೋಷವನ್ನು ಗುರ್ತಿಸುವುದು
3. ಕಾಗುಣಿತವನ್ನು ಪರಿಗಣಿಸದೆ ಅಭ್ಯಾಸ ಮಾಡಿಸುವುದು
4. ಯಾಂತ್ರಿಕವಾಗಿ ಕಲಿಸುವುದು

20. ಅಕ್ಷರ ಮತ್ತು ಪದ ಜೋಡಣೆ ಕಲಿಸುವ ಪ್ರಮುಖ ಸಾಧನ..
1. ಉಕ್ತಲೇಖನ
2. ಚಿತ್ರ ಬರೆಯುವ ಅಭ್ಯಾಸ
3. ಪದಕೋಶಗಳ ಅಭ್ಯಾಸ
4. ಕಾಪಿ ಪುಸ್ತಕ ಅಭ್ಯಾಸ ✔

21. ಸೂಕ್ಷ್ಮ ವಾಚನ ಎಂದರೆ..
1. ಪಠ್ಯದ ಮುಖ್ಯಾಂಶಗಳನ್ನು ಓದುವುದು
2. ವೇಗವಾಗಿ ಓದುವುದು
3. ವಿಮರ್ಶಾತ್ಮಕ ದೃಷ್ಠಿಯಿಂದ ಓದುವುದು
4. ನಿರ್ದಿಷ್ಟ ಮಾಹಿತಿ/ ಅಂಶವನ್ನು ಅನ್ವೇಷಿಸಲು ಓದುವುದು✔

22. ಉತ್ತಮ ಮಾತುಗಾರಿಕೆ ಕೌಶಲ ಬೆಳೆಸುವ ಚಟುವಟಿಕೆ..
1. ಕಾಪಿ ಪುಸ್ತಕ ಅಭ್ಯಾಸ
2. ಪಾತ್ರಾಭಿನಯ ಚಟುವಟಿಕೆ✔
3. ದಿನಪತ್ರಿಕೆಗಳ ಸಂಗ್ರಹ
4. ವ್ಯಾಕರಣ ನಿಯಮಗಳ ಕಂಠಪಾಠ

23. ಇದು ಗದ್ಯ ಭೋಧನೆಯ ಪ್ರಮುಖ ಉದ್ದೇಶ..
1. ಓದು, ಬರಹ , ಗ್ರಹಿಕೆ ಮತ್ತು ಅಭಿವ್ಯಕ್ತಿ ಸಾಮಥ್ರ್ಯ ಬೆಳೆಸುವುದು.✔
2. ಆನಂದ, ಸೌಂದರ್ಯಪ್ರಜ್ಞೆ ಮತ್ತು ರಸಸ್ವಾದನೆ ಮೂಡಿಸುವುದು.
3. ಗಾಯನ ಮತ್ತು ಅಭಿನಯ ಕೌಶಲಗಳಲ್ಲಿ ತರಬೇತಿ ನೀಡುವುದು.
4. ಗದ್ಯದಲ್ಲಿನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಠಪಾಠ ಮಾಡಿಸುವುದು.

24. ಗಮಕ ಕಲೆ ಎಂಬುದು..
1. ಪದ್ಯದ ರೂಪಾಂತರ
2. ಪದ್ಯದ ವಿಮರ್ಶೆ✔
3. ಕಾವ್ಯದ ಗಾಯನ
4. ಕವಿಯ ಸ್ಪೂರ್ತಿ

25. ಪರಿಹಾ ರ     ಬೋಧನೆಯಲ್ಲಿ ಶಿಕ್ಷಕರು ಮುಖ್ಯವಾಗಿ ಪಾಲಿಸಬೇಕಾದ ಕ್ರಮ..
1. ನಿಯಂತ್ರಿತ ಅಭ್ಯಾಸ ಮಾಡಿಸುವುದು
2. ಎಲ್ಲಾ ಪಾಠಗಳನ್ನು ಕೇವಲ ಬೋಧನೆ ಮಾಡುವುದು
3. ಕಲಿಕಾ ಸಾಮಥ್ರ್ಯದಲ್ಲಿ ಕಂಡು ಬರುವ ದೋಷ ನಿವಾರಣೆ ಮಾಡುವುದು. ✔
4. ವಿದ್ಯಾರ್ಥಿಗಳು ತಾವೇ ಅಭ್ಯಾಸ ಮಾಡಲು ಮಾರ್ಗದರ್ಶಿಸುವುದು

26. ನೀಲ ನಕಾಶೆಯಿಂದಾಗುವ ಪ್ರಯೋಜನಗಳಲ್ಲಿ ಇದು ಸೇರಿಲ್ಲ..
1. ಪ್ರಶ್ನೆಪತ್ರಿಕೆ ರಚಿಸಲು ಮಾರ್ಗದರ್ಶನ ನೀಡುತ್ತದೆ.
2. ಪ್ರಶ್ನೆಪತ್ರಿಕೆ ರಚನೆಯಲ್ಲಿ ಗೊಂದಲವನ್ನುಂಟು ಮಾಡುತ್ತದೆ. ✔
3. ಪ್ರಶ್ನೆಗಳ ಪುನರಾವರ್ತನೆಯನ್ನು ತಡೆಯುತ್ತದೆ.
4. ವಿವಿಧ ಉದ್ದೇಶಗಳಗನುಗುಣವಾಗಿ ವಿವಿಧ ರೀತಿಯ ಪ್ರಶ್ನೆಗಳನ್ನು ರಚಿಸಲು ನೆರವಾಗುತ್ತದೆ.

27. 6 ನೇ ತರಗತಿಯಲ್ಲಿ 10 ಜನ ವಿದ್ಯಾರ್ಥಿಗಳು ಕನ್ನಡವನ್ನು ಸರಾಗವಾಗಿ ಓದಲು ಶಕ್ತರಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಶಿಕ್ಷಕನು ಕೈಗೊಳ್ಳಬಹುದಾದ ತಕ್ಷಣದ ಪರಿಹಾರ ಕಾರ್ಯ..
1. ಹೆಚ್ಚು ಪ್ರಮಾಣದ ಮನೆಗೆಲಸ ಅಭ್ಯಾಸಗಳನ್ನು ನೀಡುವುದು.
2. ಸರಾಗವಾಗಿ ಓದುವ ಸಾಮಥ್ರ್ಯದ ಪ್ರಾಮುಖ್ಯತೆ ತಿಳಿಸುವುದು.
3. ಕ್ರಿಯಾ ಸಂಶೋಧನೆ ಕೈಗೊಳ್ಳುವುದು.✔
4. ಹಿಂದಿನ ತರಗತಿಯಲ್ಲಿ ಉಳಿಸುವುದು.

28. ‘ಹೆಮ್ಮರ’ ಪದವು ಈ ಸಂಆಸಕ್ಕೆ ಉದಾಹರಣೆಯಾಗಿದೆ..
1. ಕರ್ಮಧಾರೆಯ ✔
2. ತತ್ಪುರುಷ
3. ಬಹುವ್ರೀಹಿ
4. ದ್ವಂದ್ವ

29. ‘ ಮೃಗ’ ಈ ಪದದ ತದ್ಬವ ರೂಪ ಇದಾಗಿದೆ..
1. ಖಗ
2. ಮೊಗ
3. ಮಗ
4. ಮಿಗ ✔

30. ‘ಹೊಟ್ಟುಕುಟ್ಟು’ ಈ ನುಡಿಗಟ್ಟಿನ ಅರ್ಥ ಹೀಗಿದೆ..
1. ಉಪಯೋಗವಿರದ ಕೆಲಸ ಮಾಡು ✔
2. ಹೊಗಳಿ ಉಬ್ಬಿಸು
3. ತಪ್ಪು ಕೆಲಸ ಮಾಡು
4. ತುಂಟಾಟ ಮಾಡು

# ಇವುಗಳನ್ನೂ ಓದಿ : 

# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-1 । PART-1 – LANGUAGE-1 : KANNADA – Key Answers
# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-1 । PART-II – LANGUAGE-2 : ENGLISH – Key Answers
# ಟಿಇಟಿ ಪ್ರಶ್ನೆಪತ್ರಿಕೆ – 2021- PAPER-1 । PART-III – CHILD DEVELOPMENT AND PEDAGOGY – Key Answers

# ಎಫ್‌ಡಿಎ ಪ್ರಶ್ನೆ ಪತ್ರಿಕೆ – 2019 – ಸಾಮಾನ್ಯ ಕನ್ನಡ | FDA QUESTION PAPER – 2019
# ಎಫ್‌ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ – 2019 – ಸಾಮಾನ್ಯ ಜ್ಞಾನ | FDA QUESTION PAPER – 2019
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್-2, ವಿಜ್ಞಾನ
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-3, ಮಕ್ಕಳ ವಿಕಾಸ ಮತ್ತು ಶೈಕ್ಷಣಿಕ ಮನೋವಿಜ್ಞಾನ
# ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-1, ಭಾಷೆ-1 ಕನ್ನಡ

error: Content Copyright protected !!